Friday, January 9, 2009

ಅನುಗಾಲವು ಚಿಂತೆ ಜೀವಕ್ಕೆ

(ರಾಗ ಕಾಪಿ ಅಟತಾಳ)

ಅನುಗಾಲವು ಚಿಂತೆ ಜೀವಕ್ಕೆ | ತನ್ನ
ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ||

ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ
ಮತಿಹೀನ ಸತಿಯಾದರು ಚಿಂತೆಯು
ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ
ಮಿತಿಮೇರೆಯಿಲ್ಲದ ಮೋಹದ ಚಿಂತೆಯು ||

ಮಕ್ಕಳಿಲ್ಲದ ಚಿಂತೆ , ಮಕ್ಕಳಾದರು ಚಿಂತೆ
ಒಕ್ಕಾಳು ಹೊನ್ನು ಕೊಡುವ ಚಿಂತೆಯು
ಅಕ್ಕರೆಯಿಂದಲೆ ತುರುಗಳ ಕಾಯ್ದರು
ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ ||

ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆ
ಹಿಡಿಹೊನ್ನು ಕೈಯೊಳಾದರು ಚಿಂತೆಯು
ಪೊಡವಿಯೊಳಗೆ ನಮ್ಮ ಪುರಂದರವಿಠಲನ
ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ||


==============================



ಹೂವ ತರುವರ ಮನೆಗೆ
(ರಾಗ ಕಾಂಭೋಜ ಝಂಪೆ ತಾಳ )



ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮಿಪತಿ ಇವಗಿಲ್ಲ ಗರುವ ||


ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಾಧುಶಯನ ಮುಕುಂದ ಎನೆ
ಎಂದೆಂದು ವಾಸಿಪನಾಮಂದಿರದೊಳಗೆ ||

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ
ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ
ಸರಿಭಾಗ ಕೊಡುವ ತನ್ನರಮನೆಯೊಳಗೆ ||

ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ಹುಲ್ಲನು ತಿನಿಸಿದ
ಅಂಡಜವಾಹನ ಶ್ರೀಪುರಂದರವಿಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||

========================

ತೆಗೆ ನಿನ್ನ ಮುಸುಕವನು

(ರಾಗ ನಾದನಾಮಕ್ರಿಯೆ )

ತೆಗೆ ನಿನ್ನ ಮುಸುಕವನು ||ಪ||
ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು
ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು ||ಅ||

ಗೋವ ಕಾಯಲು ಪೋಗಿ
ಧಾವತಿಪಟ್ಟು ಬಹು
ದೇವಕಿದೇವಿಯೆ
ಈವಾಗ ಬಂದೆನು ||

ಕಾಳಿಯ ಮಡುವಿಲಿ
ಏಳು ಹೆಡೆಯ ಮೇಲೆ
ಕಾಳಿಂಗನ ತುಳಿದು
ಭಾಳ ಶ್ರಮದಿ ಬಂದೆ ||

ಉಟ್ಟ ಸೀರೆಯ ಬಿಟ್ಟು
ದಿಟ್ಟ ಬಾಲೆಯರಿರಲು
ಥಟ್ಟನೆ ಸೆಳೆದೊಯ್ದು
ಕಷ್ಟ ಬಟ್ಟೆ ಮರವೇರಿ ||

ವಿಷದ ಮೊಲೆಯನುಂಡು
ಕಸವಸಿಬಡುತಿಹೆ
ನಸುನಗೆಯಲಿ ಉಂಬೆ
ಹಸಿವೆ ಬಹಳಾಗಿದೆ ||

ತ್ವರದಿ ತೊಡೆಯ ಮೇಲೆ |
ಕರೆದು ಕೂಡಿಸು ತಾಯಿ
ಪುರಂದರವಿಠಲ
ವರದ ಸರ್ವೋತ್ತಮಗೆ ||

========================


ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ
(ರಾಗ ಶಂಕರಾಬಾರಣ ಅಟತಾಳ)





ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||

ಆನೆ ಕುದುರೆ ಒಂಟೆ ಲೊಳಲೊಟ್ಟೆ , ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ , ದೊಡ್ಡ
ಕ್ಷೋಣೀಶನೆಂಬುದು ಲೊಳಲೊಟ್ಟೆ ||


ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ
ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲ ಕೋಟೆ ಲೊಳಲೊಟ್ಟೆ , ಮತ್ತೆ
ಉತ್ತಮಪ್ರಭುತ್ವ ಲೊಳಲೊಟ್ಟೆ ||

ಕಂಟಕರೆಂಬೋದು ಲೊಳಲೊಟ್ಟೆ , ನಮ್ಮ
ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ್ನ
ಬಂಟನಾಗದವ ಲೊಳಲೊಟ್ಟೆ ||

===========================


ಆರು ಹಿತವರು ನಿಮಗೆ ಈ ಮೂವರೊಳಗೆ ?
(ರಾಗ ಮುಖಾರಿ ಝಂಪೆತಾಳ)

ಆರು ಹಿತವರು ನಿಮಗೆ ಈ ಮೂವರೊಳಗೆ ?
ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? ||

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿಯೆನಿಸಿ
ಭಿನ್ನವಲ್ಲದಲರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ ||

ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ
ಚೆನ್ನಿಗನಸುವಳಿಯೆ ಹೊರಗೆ ಹಾಕುವರು ||


ಉದ್ಯೋಗ ವ್ಯವಹರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲೆ ಗಳಿಸಿ ಸಿಕ್ಕಿದಂಥರ್ಥವನು
ಸದ್ಯದಲ್ಲಾರು ಉಂಬುವರು ಹೇಳು ಮನುಜ ||

ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ
ಲೋಕದೊಳು ಗಳಿಸಿದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೋದಲ್ಲದೆ ||


ಅಸ್ಥಿರದ ದೇವನು ನೆಚ್ಚಿ ನಂಬಲು ಬೇಡ
ಸ್ವಸ್ಥದಲಿ ನೆನೆ ಕಂಡ್ಯ ಹರಿಪಾದವ
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೇ
ಉತ್ತಮೋತ್ತಮನೆಂದು ಸುಖಿಯಾಗು ಮನುಜ ||


===================================



ಹೇವವೆಲ್ಲಿದುಹಯ್ಯ ವೈಕುಂಠಪತಿಗೆ
( ರಾಗ ಶಂಕರಾಭರಣ ಅಟತಾಳ)


ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ ||
ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ||

ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ
ಒಬ್ಬ ಮಾವನ ಕೂಡೆ ಕಡಿದಾಡಿದ
ಒಬ್ಬ ಭಾವನ ಹಿಡಿದು ಹೆಡೆಮುಡಿಯ ಕಟ್ಟಿದ
ಒಬ್ಬ ಮೈದುನಗೆ ಬಂಡಿಬೋವನಾದ ||

ಕುಂಭಿನಿಗೆ ಪತಿಯಾದ , ಕುಂಭಿನಿಗೆ ಸುತನಾದ
ಕುಂಭಿನೀಮಗನ ಸಂಹಾರ ಮಾಡ್ದ
ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ
ಅಂಬುಧಿಜಾತೆಗೆ ಸ್ವಾಮಿಯಾದ ||


ಬೊಮ್ಮನಾ ಸಂಹರಿಸಿ ಅವರ ಮಕ್ಕಳನು
ಈ ಮಹಿಯೊಳಗೆ ಅವರ ಹತಮಾಡಿದ
ರಮ್ಮೆ ವೈಕುಂಠಪತಿ ಪುರಂದರಾವಿಠಲ
ಬೊಮ್ಮಮೂರುತಿಗೇಕೆ ಬಂಧುಬಳಗ ? ||